ತಮ್ಮ ಪ್ರಿಯತಮೆಗೆ ಇನ್ಸ್ಟಾಗ್ರಾಂನಲ್ಲಿ ಅಶ್ಲೀಲ ಪೋಟೋ ಹಾಕಿದ ಕಾರಣಕ್ಕೆ ತಮ್ಮದೇ ಅಭಿಮಾನಿ ಚಿತ್ರದುರ್ಗದ ರೇಣುಕಾಸ್ವಾಮಿನನ್ನು ಹತ್ಯೆಗೈದ ಆರೋಪದ ಪೊಲೀಸರ ಅತಿಥಿಗಳಾಗಿರುವ ಚಾಲೆಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಗ್ಯಾಂಗ್ ಸದಸ್ಯರ ಸ್ವವಿವರ ಸಂಪೂರ್ಣ ಚಿತ್ರಣ ಹೀಗಿದೆ. ಈ ಪೈಕಿ 9ನೇ ಆರೋಪಿ ಚಿತ್ರದುರ್ಗದ ರಾಜು ಎಂಬಾತ ತಲೆಮರೆಸಿಕೊಂಡಿದ್ದಾನೆ.
ಎ1-ಪವಿತ್ರಾಗೌಡ (33)
ಬೆಂಗಳೂರು ಹೊರವಲಯದ ಕನಕಪುರ ರಸ್ತೆ ತಲಘಟ್ಟಪುರದ ಪವಿತ್ರಾಗೌಡ, ಮಾಡೆಲಿಂಗ್ ಮೂಲಕ ಬಣ್ಣ ಲೋಕಕ್ಕೆ ಪ್ರವೇಶಿಸಿದ್ದಳು. ಬಿಸಿಎ ಪದವೀಧರೆಯಾದ ಪವಿತ್ರಾ, ಮೊದಲಿಗೆ ಚಿನ್ನಾಭರಣ ಮಳಿಗೆಗಳ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿದ್ದಳು. ಉತ್ತರಪ್ರದೇಶ ಮೂಲದ ಸಾಫ್ಟ್ವೇರ್ ಉದ್ಯೋಗಿ ಸಂಜಯ್ ಸಿಂಗ್ ಜತೆ ವಿವಾಹವಾಗಿದ್ದರು. ಈ ದಂಪತಿಗೆ ಹೆಣ್ಣು ಮಗುವಿದೆ. ಆದರೆ ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಮೊದಲ ಪತಿಯಿಂದ ದೂರವಾಗಿದ್ದ ಆಕೆ, ತರುವಾಯ ದರ್ಶನ್ ಸಾಂಗತ್ಯಕ್ಕೆ ಬಂದಳು. ದರ್ಶನ್ ಜತೆ ಪ್ರೇಮಕ್ಕೆ 10 ವರ್ಷಗಳ ತುಂಬಿವೆ ಎಂದು ಆಕೆಯೇ ಹೇಳಿಕೊಂಡಿದ್ದಳು. ಇದೇ ವಿಷಯವಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಜತೆ ಸಾಮಾಜಿಕ ಜಾಲತಾಣಗಲ್ಲಿ ಪೋಸ್ಟ್ ವಾರ್ ಸಹ ನಡೆದಿತ್ತು. ರಾಜರಾಜೇಶ್ವರಿ ನಗರದಲ್ಲಿ ಬ್ಯೂಟಿಕ್ ನಡೆಸುತ್ತಿರುವ ಆಕೆ, ತನ್ನ ಮಗಳು ಹಾಗೂ ತಾಯಿ ಜತೆ ನೆಲೆಸಿದ್ದಾಳೆ. ದರ್ಶನ್ ದಾಂಪತ್ಯದಲ್ಲಿ ಮಧ್ಯ ಪ್ರವೇಶಿಸಿದ್ದಾಳೆ ಎಂದು ಆರೋಪಿಸಿ ಪವಿತ್ರಾಗೌಡ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಅಭಿಮಾನಿಗಳು ಟೀಕಿಸುತ್ತಿದ್ದರು. ಅದೇ ರೀತಿ ಚಿತ್ರದುರ್ಗದ ಅಭಿಮಾನಿ ರೇಣುಕಾಸ್ವಾಮಿ ಸಹ ಒಬ್ಬಾತನಾಗಿದ್ದ. ತಮಗೆ ಇನ್ಸ್ಟಾಗ್ರಾಂನಲ್ಲಿ ಅಶ್ಲೀಲ ಪೋಟೋ ಕಳುಹಿಸಿದ್ದ ಆತನ ಬಗ್ಗೆ ದರ್ಶನ್ ಅವರಿಗೆ ಪವಿತ್ರಾ ಹೇಳಿದ್ದಳು. ಈಕೆಯ ಮಾತು ಕೇಳಿ ಕೆರಳಿದ ದರ್ಶನ್, ಕೊನೆಗೆ ತಮ್ಮ ಅಭಿಮಾನಿಯ ಪ್ರಾಣವನ್ನು ತೆಗೆದ ಎಂಬ ಆರೋಪಕ್ಕೆ ತುತ್ತಾಗಿದ್ದಾರೆ.
ಎ.2- ದರ್ಶನ್ ತೂಗುದೀಪ
ನಟ ದರ್ಶನ ಯಶಸ್ಸಿನ ಹಿಂದೆ ಅವರ ಬೆನ್ನಿಗೆ ನೂರೆಂಟು ವಿವಾದಗಳು ಅಂಟಿಕೊಂಡಿವೆ. ಈಗ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಪೊಲೀಸರ ಅತಿಥಿಯಾಗಿದ್ದಾರೆ. ತಮ್ಮ ಪ್ರಿಯತಮೆಗೆ ಇನ್ಸ್ಟಾಗ್ರಾಂ ನಲ್ಲಿ ಅಶ್ಲೀಲ ಪೋಟೋ ಹಾಗೂ ಕಾಮೆಂಟ್ ಮಾಡಿದ ಕಾರಣಕ್ಕೆ ಸಿಟ್ಟಿಗೆದ್ದು ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ತಮ್ಮ ಸಹಚರರ ಮೂಲಕ ಬೆಂಗಳೂರಿಗೆ ಕರೆಸಿ ಬಳಿಕ ಹಲ್ಲೆ ನಡೆಸಿ ಹತ್ಯೆಗೈದ ಆರೋಪ ಬಂದಿದೆ.
ಎ.3- ಪುಟ್ಟಸ್ವಾಮಿ ಅಲಿಯಾಸ್ ಪವನ್ (29)
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಅಕ್ಕೂರು ಗ್ರಾಮದ ಪುಟ್ಟಸ್ವಾಮಿ ಅಲಿಯಾಸ್ ಪವನ್, ಬನಶಂಕರಿ 6ನೇ ಹಂತದಲ್ಲಿ ವಾಸವಾಗಿದ್ದ. ಹಲವು ವರ್ಷಗಳಿಂದ ನಟ ದರ್ಶನ್ ಬಳಿ ಆತ ಕೆಲಸ ಮಾಡಿಕೊಂಡಿದ್ದ. ಒಂದರ್ಥದಲ್ಲಿ ಈತ ದರ್ಶನ್ ಹಾಗೂ ಅವರ ಪ್ರಿಯತಮೆ ಪವಿತ್ರಾಗೌಡರ ನಡುವಿನ ಸೇತುವೆ. ದರ್ಶನ್ ಮನೆಯಲ್ಲಿ ಮಾತ್ರವಲ್ಲದೆ ಪವಿತ್ರಾ ಗೌಡ ಮನೆ ಕಾರ್ಯಗಳಿಗೆ ಸಹ ಆತ ಹೆಗಲು ಕೊಡುತ್ತಿದ್ದ. ಇದಕ್ಕಾಗಿ ಇಬ್ಬರಿಗೆ ಆತ ಆಪ್ತ ಭಂಟನಾಗಿದ್ದ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪವಿತ್ರಾಗೌಡಳನ್ನು ಗುರಿಯಾಗಿಸಿಕೊಂಡು ದರ್ಶನ್ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದ ಸಂಗತಿಯನ್ನು ದರ್ಶನ್ಗೆ ಪವನ್ ಮಾಹಿತಿಕೊಟ್ಟಿದ್ದ. ಅದೇ ರೀತಿ ಚಿತ್ರದುರ್ಗದ ರೇಣುಕಾಸ್ವಾಮಿ ವಿಚಾರವನ್ನು ಸಹ ಪವನ್ ಮೂಲಕವೇ ದರ್ಶನ್ಗೆ ಮುಟ್ಟಿಸಿದ್ದಳು ಎಂಬ ಮಾಹಿತಿ ಇದೆ.
ಎ.4- ರಾಘವೇಂದ್ರ (43)
ಚಿತ್ರದುರ್ಗದ ಕೊಳಿ ಬುರುಜಿನ ಹಟ್ಟಿ ನಿವಾಸಿ ರಘು ಅಲಿಯಾಸ್ ರಾಘವೇಂದ್ರ (43). ವೃತ್ತಿಯಲ್ಲಿ ಆಟೋ ಚಾಲಕ. ನಟ ದರ್ಶನ್ ಕಟ್ಟಾ ಅಭಿಮಾನಿಯಾಗಿದ್ದ ಆತ, ದರ್ಶನ್ ಪರಿಚಿತರ ವಲಯದಲ್ಲಿದ್ದ. ಚಿತ್ರದುರ್ಗ ಜಿಲ್ಲಾ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷನೂ ಆಗಿದ್ದ. ದರ್ಶನ್ ಸಿನಿಮಾಗಳು ಬಿಡುಗಡೆಯಾದಾಗ ಕಟೌಟ್ ಕಟ್ಟಿಸುವುದು, ಹಾಲೆರೆಯುವುದು ಮುಂತಾದ ಕೆಲಸ ಮಾಡಿಕೊಂಡಿದ್ದ.
ಎ.5- ನಂದೀಶ್
ಮಂಡ್ಯ ತಾಲೂಕು ಚಾಮಲಾಪುರ ಗ್ರಾಮದ ನಂದೀಶ್, ಕಡು ಬಡತನ ಹಿನ್ನಲೆ ಹೊಂದಿದ್ದಾನೆ. ಆತನ ಹುಟ್ಟೂರಿನಲ್ಲಿ ತುಂಡು ಭೂಮಿ ಸಹ ಇಲ್ಲ. ಹಲವು ವರ್ಷಗಳಿಂದ ನಟ ದರ್ಶನ್ ಬಳಿ ಕೆಲಸ ಮಾಡಿಕೊಂಡು ನಂದೀಶ ಜೀವನ ಕಟ್ಟಿಕೊಂಡಿದ್ದ. ಬದುಕು ಕೊಟ್ಟವನೇ ಈಗ ಆತನ ಪಾಲಿಗೆ ವಿಲನ್ ಆಗಿದ್ದಾನೆ. ಸರ್ಕಾರದ ಮಂಜೂರು ಮಾಡಿದ್ದ ನಿವೇಶನದಲ್ಲಿ ಚಿಕ್ಕದೊಂದು ಸೂರು ಕಟ್ಟಿಕೊಂಡು ನಂದೀಶನ ಹೆತ್ತವರು ನೆಲೆಸಿದ್ದಾರೆ. ಅವರು ಕೃಷಿ ಕೂಲಿ ಕೆಲಸಗಾರರು. ಹೀಗೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ನಂದೀಶ್, ಮೊದಲು ಕೇಬಲ್ ಕೆಲಸ ಮಾಡಿಕೊಂಡಿದ್ದ. ಈತನಿಗೆ ದರ್ಶನ್ ಮೇಲೆ ಹುಚ್ಚು ಅಭಿಮಾನವಿತ್ತು.
ಎ.6- ಜಗದೀಶ ಅಲಿಯಾಸ್ ಜಗ್ಗ (35)
ಜಗದೀಶ್ ಅಲಿಯಾಸ್ ಚಿತ್ರದುರ್ಗದ ಅಗಸನಕಲ್ಲು ಬಡಾವಣೆ ನಿವಾಸಿ. ಆಟೋ ಚಾಲಕ. ಈತನ ಪತ್ನಿ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾಳೆ. ಮದುವೆಯಾಗಿ 9 ವರ್ಷವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಅಲ್ಲದೇ ಅಪ್ಪ, ಅಮ್ಮ ಕೂಡಾ ಜೊತೆಯಲ್ಲಿ ವಾಸವಾಗಿದ್ದಾರೆ. ದರ್ಶನ್ ಹುಚ್ಚು ಅಭಿಮಾನಿ. ಹಾಗಾಗಿ ತನ್ನ ಇಡೀ ಆಟೋದಲ್ಲಿ ದರ್ಶನ್ ಭಾವಚಿತ್ರ ಅಂಟಿಸಿಕೊಂಡಿದ್ದಾನೆ. ಹಿಂದೊಮ್ಮೆ ಈತ ಕೂಡಾ ದರ್ಶನ್ ಅಭಿಮಾನಿ ಬಳಗದ ಚಿತ್ರದುರ್ಗ ಅಧ್ಯಕ್ಷನಾಗಿದ್ದ.
ಎ.7- ಅನು ಕುಮಾರ್ ಅಲಿಯಾಸ್ ಅನು (32)
ಚಿತ್ರದುರ್ಗ ನಗರದ ಸಿಹಿನೀರು ಹೊಂಡದ ಸಮೀಪ ಪುಟ್ಟ ಜೋಪಡಿ ಮನೆಯಲ್ಲಿ ಅನು ಕುಮಾರ್ ಕುಟುಂಬ ನೆಲೆಸಿದೆ. ಆಟೋ ಚಾಲಕನಾಗಿದ್ದ ಆತನೇ ಆ ಬಡ ಕುಟುಂಬಕ್ಕೆ ಆಧಾರವಾಗಿದ್ದ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪುತ್ರನ ಬಂಧನ ವಿಚಾರ ತಿಳಿದು ಆಘಾತದಿಂದ ತಂದೆ ಚಂದ್ರಣ್ಣ ಪ್ರಾಣ ಕಳೆದುಕೊಂಡಿದ್ದರು. ಅನುವಿಗೆ ನಟ ಧನ್ವೀರ್ ಕಂಡರೆ ಬಹಳ ಇಷ್ಟ. ಧನ್ವೀರ್ ಹಾಗೂ ದರ್ಶನ್ ಸಂಬಂಧ ಚೆನ್ನಾಗಿರುವುದರಿಂದ ಮೆಚ್ಚಿನ ನಟ ಧನ್ವೀರ್ ನೋಡಬೇಕೆಂದರೆ ದರ್ಶನ್ ಭೇಟಿಯಾಗಬೇಕೆಂದು ಭಾವಿಸಿದ್ದ. ದರ್ಶನ್ ಅಭಿಮಾನಿ ಬಳಗದ ಅಧ್ಯಕ್ಷ ರಾಘವೇಂದ್ರ ಹಾಗೂ ಈತನ ನಡುವೆ ಮೊದಲಿನಿಂದಲೂ ಒಡನಾಟವಿತ್ತು.
ಎ.8- ರವಿ ಅಲಿಯಾಸ್ ರವಿಶಂಕರ್ (36)
ಚಿತ್ರದುರ್ಗ ತಾಲೂಕಿನ ಐನಹಳ್ಳಿ ಕುರುಬರಹಟ್ಟಿ ಗ್ರಾಮದವನಾದ ರವಿಶಂಕರ್ ಕಾರು ಚಾಲಕ. ಸ್ವಂತಕ್ಕೊಂದು ಕಾರು ಇಟ್ಟುಕೊಂಡು ಬಾಡಿಗೆ ಓಡಿಸುತ್ತಿದ್ದಾನೆ. ಕುರುಬರಹಟ್ಟಿಯಲ್ಲೇ ವಾಸವಾಗಿದ್ದಾನೆ. ಉಳಿದಂತೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ಸ್ಥಳೀಯವಾಗಿ ಸಂಭಾವಿತ ಎಂದು ಹೊಗಳುತ್ತಾರೆ. ದರ್ಶನ್ ಹಾಗೂ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಸೇರಿ ಇತರೆ ಆರೋಪಿಗಳ ಜತೆ ಹೆಚ್ಚಿನ ಒಡನವಾಟವಿಲ್ಲ. ಆದರೆ ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣಕ್ಕೆ ತನ್ನ ಕಾರು ಬಾಡಿಗೆಗೆ ಹೋಗಿ ಈಗ ಕೊಲೆ ಪ್ರಕರಣದಲ್ಲಿ ರವಿ ಸಿಲುಕುವಂತಾಗಿದೆ ಎಂದು ತಿಳಿದು ಬಂದಿದೆ.
ಎ.10- ಪಟ್ಟಣಗೆರೆ ವಿನಯ್ (38)
ರಾಜರಾಜೇಶ್ವರಿ ನಗರ ಸುತ್ತಮುತ್ತ ಪ್ರದೇಶದಲ್ಲಿ ವಿನಯ್ ಸ್ಥಳೀಯ ಮುಖಂಡನಾಗಿದ್ದ. ಆತನ ಸೋದರ ಮಾವ ಪಟ್ಟಣಗೆರೆ ಜಯಣ್ಣ ಜಮೀನುದಾರ. ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ವ್ಯವಹಾರದಲ್ಲಿ ತೊಡಗಿದ್ದ ವಿನಯ್, ರಾಜರಾಜೇಶ್ವರಿ ನಗರದಲ್ಲಿ ಐಷರಾಮಿ ಸೋನಿಬ್ರೋಕ್ ಹೆಸರಿನ ಪಬ್ ಅನ್ನು ನಡೆಸುತ್ತಿದ್ದಾನೆ. ಆರ್.ಆರ್.ನಗರದಲ್ಲೇ ದರ್ಶನ್ ನೆಲೆಸಿದ್ದರಿಂದ ಅವರಿಗೆ ವಿನಯ್ ಪರಿಚಯವಾಗಿತ್ತು. ಸ್ಥಳೀಯವಾಗಿ ಪ್ರಭಾವಿಯಾಗಿದ್ದ ಕಾರಣ ಆತ್ಮೀಯ ಒಡನಾಟ ಬೆಳೆಯಿತು. ಇನ್ನು ತನ್ನ ಸೋದರ ಮಾವ ಕಟ್ಟಿದ್ದ ಕನ್ನಡಪರ ಸಂಘಟನೆಯಲ್ಲಿ ವಿನಯ್ ಸಕ್ರಿಯವಾಗಿದ್ದ
ಎ.11 ನಾಗರಾಜ ಅಲಿಯಾಸ್ ನಾಗಿ (41)
ಮೈಸೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ನಾಗಬೇಕು ಎಂದು ಕನಸು ಕಂಡಿದ್ದ ನಟ ದರ್ಶನ್ ಪರಮಾಪ್ತನಾದ ನಾಗರಾಜು ಅಲಿಯಾಸ್ ನಾಗ ಈಗ ಕೊಲೆ ಆರೋಪ ಹೊತ್ತು ಪೊಲೀಸರ ಅತಿಥಿಯಾಗಿದ್ದಾನೆ. ಮೈಸೂರಿನ ಟಿ.ಕೆ.ಲೇಔಟ್ ನಿವಾಸಿ ನಾಗರಾಜ್, ಆರಂಭ ದಿನಗಳಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ. ತನ್ನ ಸ್ನೇಹಿತರ ಮೂಲಕ ದರ್ಶನ್ ಆಪ್ತವಲಯಕ್ಕೆ ಸೇರಿದ ಆತ, 15 ವರ್ಷಗಳಿಂದ ದರ್ಶನ್ ಜೊತೆಯಲ್ಲೇ ಇದ್ದಾನೆ. ಒಂದು ರೀತಿಯ ದರ್ಶನ್ ಮ್ಯಾನೇರ್ ಆಗಿದ್ದ ಎನ್ನಲಾಗಿದೆ
.12 ದರ್ಶನ್ ಕಾರು ಚಾಲಕ ಲಕ್ಷ್ಮಣ
ಬೆಂಗಳೂರಿನ ಆರ್ಪಿಸಿ ಲೇಔಟ್ ಬಳಿ ನೆಲೆಸಿದ್ದ ಲಕ್ಷ್ಮಣ, ಹಲವು ವರ್ಷಗಳಿಂದ ದರ್ಶನ್ ಕಾರು ಚಾಲಕನಾಗಿದ್ದ. ತಮ್ಮ ಪರಿಚಿತರ ಮೂಲಕ ಆತನಿಗೆ ದರ್ಶನ್ ಸ್ನೇಹವಾಗಿತ್ತು. ಅಂದಿನಿಂದ ದರ್ಶನ್ ಬಳಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ್, ನಟನ ಮನೆ ನಿರ್ವಹಣೆಯ ಹೊಣೆಗಾರಿಕೆ ಸಹ ನಿರ್ವಹಿಸುತ್ತಿದ್ದ.
.13 ಬಿಜೆಪಿ ಶಾಸಕರ ಸಂಬಂಧಿ ದೀಪಕ್ (39)
ರಾಜರಾಜೇಶ್ವರಿನಗರದ ಬಿಇಎಂಎಲ್ ಲೇಔಟ್ 3ನೇ ಕ್ರಾಸ್ ನಿವಾಸಿ ದೀಪಕ್ (39) ದರ್ಶನ್ ಆಪ್ತ ಬಳಗದಲ್ಲಿ ಮತ್ತೊಬ್ಬ ಸದಸ್ಯ. ಈತ ಬೆಂಗಳೂರಿನ ಪ್ರಭಾವಿ ಬಿಜೆಪಿ ಶಾಸಕರೊಬ್ಬರ ಹತ್ತಿರದ ಸಂಬಂಧಿ ಎನ್ನಲಾಗಿದೆ. ರಿಯಲ್ ಎಸ್ಟೇಟ್, ಫೈನಾನ್ಸ್ ವ್ಯವಹಾರದಲ್ಲಿ ತೊಡಗಿದ್ದ ದೀಪಕ್, ಈಗ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ನಡೆದಿರುವ ಶೆಡ್ ಅನ್ನು ಪಾಲುದಾರಿಕೆಯಲ್ಲಿ ನಡೆಸುತ್ತಿದ್ದ
ಎ.14 ಸಾಫ್ಟ್ವೇರ್ ಉದ್ಯೋಗಿ ಪ್ರದೂಷ್
ಗಿರಿನಗರದಲ್ಲಿ ತನ್ನ ಕುಟುಂಬದ ಜತೆ ನೆಲೆಸಿರುವ ಪ್ರದೂಪ್, ಇತ್ತೀಚಿನ ವರ್ಷಗಳಲ್ಲಿ ನಟ ದರ್ಶನ್ ಆಪ್ತಕೂಟದಲ್ಲಿ ಪ್ರಮುಖನಾಗಿದ್ದ. ಸಾಫ್ಟ್ವೇರ್ ಕಂಪನಿಯಲ್ಲಿ ದೊಡ್ಡ ಮೊತ್ತದ ಪಗಾರ ಎಣಿಸುವ ಉದ್ಯೋಗಿಯಾಗಿರುವ ಪ್ರದೂಪ್ಗೆ ಬಣ್ಣ ಲೋಕದಡೆಗೆ ವಿಶೇಷ ಆಸಕ್ತಿ ಇತ್ತು. ನಟಿಸುವ ಗೀಳಿನಿಂದಲೇ ಆತನಿಗೆ ದರ್ಶನ್ ಸಂಪರ್ಕ ಬೆಳೆದಿತ್ತು. ಐಟಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡೇ ದರ್ಶನ್ ಅಭಿನಯದ ಬೃಂದಾವನ, ಬುಲ್ಬುಲ್ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಆತ ನಟಿಸಿದ್ದ. ಇನ್ನು ಕೆಲ ವರ್ಷಗಳು ಬೆಂಗಳೂರಿನ ಬಿಜೆಪಿ ಶಾಸಕರೊಬ್ಬರ ಆಪ್ತ ಸಹಾಯಕನಾಗಿ ಸಹ ಪ್ರದೂಪ್ ಕೆಲಸ ಮಾಡಿದ್ದ. ರಾಜಕೀಯಕ್ಕಿಂತ ಆತನಿಗೆ ಸಿನಿಮಾ ಸೆಳೆತ ಹೆಚ್ಚಿತ್ತು. ರೇಣುಕಾಸ್ವಾಮಿ ಹತ್ಯೆ ಕೃತ್ಯದಲ್ಲಿ ಪ್ರದೂಪ್ ಪಾತ್ರವಹಿಸಿದ್ದಾನೆ.
.15 ಕೂಲಿಕೆಲಸ ಮಾಡಿಕೊಂಡಿದ್ದ ಕಾರ್ತಿಕ್
ಪಟ್ಟಣಗೆರೆ ಶೆಡ್ನಲ್ಲಿ ಗಿರಿನಗರದ ಚಾಮುಂಡಿನಗರದ ಜಿ ಬ್ಲಾಕ್ನ ಕಾರ್ತಿಕ್ ಅಲಿಯಾಸ್ ಕಪ್ಪೆ ಶೆಡ್ನಲ್ಲಿ ಕೆಲಸ ಮಾಡಿಕೊಂಡಿದ್ದ. ಈ ಹಿಂದೆ ಈತನ ಮೇಲೆ ತಲಘಟ್ಟಪುರ ಠಾಣೆಯಲ್ಲಿ ಸಣ್ಣ ಗಲಾಟೆ ನಡೆಸಿದ ಪ್ರಕರಣವಿದೆ. ಅದೂ ಹೊರತುಪಡಿಸಿದರೆ ಕ್ರಿಮಿನಲ್ ಚರಿತ್ರೆ ಇಲ್ಲ. ಕೂಲಿ ಕೆಲಸ ಮಾಡಿಕೊಂಡು ಆತ ಜೀವನ ಸಾಗಿಸುತ್ತಿದ್ದ.
.16 ದರ್ಶನ್ಗಾಗಿ ಜೈಲಿಗೆ ಹೋಗಲು ಸಿದ್ಧನಾದ ಕೇಶವಮೂರ್ತಿ (27).
ಗಿರಿನಗರದ ಹೀರಣ್ಣನಗುಡ್ಡದ ಕೇಶವಮೂರ್ತಿ, ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ನಟ ದರ್ಶನ್ ಅಭಿಮಾನಿಯಾಗಿದ್ದ ಆತ ಅದೇ ಅಭಿಮಾನದಲ್ಲೇ ಕೊಲೆ ಪ್ರಕರಣದ ಆರೋಪ ಹೊತ್ತು ಜೈಲಿಗೆ ಹೋಗಲು ಸಹ ಸಿದ್ದನಾಗಿದ್ದ. ದರ್ಶನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್ ಮೂಲಕ ಈ ಕೃತ್ಯದಲ್ಲಿ ಕೇಶವ ಸಿಲುಕಿದ್ದಾನೆ.
ಎ.17 ಶವ ಬಿಸಾಡಿದ ನಿಖಿಲ್ ನಾಯಕ್ (21)
ಪಟ್ಟಣಗೆರೆ ಶೆಡ್ನಲ್ಲಿ ಹತ್ಯೆ ಬಳಿಕ ಸುಮನಹಳ್ಳಿ ಜಂಕ್ಷನ್ ಸಮೀಪದ ಮೋರಿಗೆ ಮೃತದೇಹ ತಂದು ಬಿಸಾಡಿದ ಹಾಗೂ ನಟ ದರ್ಶನ್ ಹೆಸರು ಹೇಳದಂತೆ ಪೊಲೀಸರಿಗೆ ಶರಣಾದವರ ಪೈಕಿ ನಿಖಲ್ ನಾಯಕ್ ಸಹ ಒಬ್ಬನಾಗಿದ್ದಾನೆ