September 19, 2024

ಬೆಂಗಳೂರು: ಬಿಗ್‌ ಬಾಸ್‌ ಬಳಿಕ ಡ್ರೋನ್‌ ಪ್ರತಾಪ್‌ ಸಮಾಜಮುಖಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಜನ ಅವರ ಮಾನವೀಯ ಗುಣಗಳನ್ನು ಮೆಚ್ಚಿಕೊಂಡಿದ್ದಾರೆ. ಜನಮನ ಮೆಚ್ಚುವ ಕಾರ್ಯವನ್ನು ಮಾಡುತ್ತಿರುವ ಪ್ರತಾಪ್‌ ಈ ಬಾರಿ ತನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಳ್ಳಲು ಮುಂದಾಗಿದ್ದಾರೆ.
ಬಿಗ್‌ ಬಾಸ್‌ ಸೀಸನ್‌ -10 ರನ್ನರ್‌ ಅಪ್‌ ಆದ ಬಳಿಕ ವೇದಿಕೆಯಲ್ಲೇ ಅವರು, ಬಿಗ್‌ ಬಾಸ್‌ ನಿಂದ ಬಂದ ಹಣವನ್ನು ಬಡವರ ಸಹಾಯಕ್ಕಾಗಿ ಬಳಸುತ್ತೇನೆ ಎಂದಿದ್ದರು. ಹೇಳಿದ ಹಾಗೆಯೇ ಅವರು ಅಗತ್ಯವಿರುವವರಿಗೆ ರೇಷನ್‌ ಹಾಗೂ ಬಡ ಹುಡುಗನೊಬ್ಬನಿಗೆ ಕಾರ್ಯಕ್ರಮದಿಂದ ಬಂದ ವಾಹನವನ್ನು ನೀಡಿದ್ದಾರೆ.
ಸಮಾಜಮುಖಿ ಕಾರ್ಯದಲ್ಲಿರುವ ಪ್ರತಾಪ್‌ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಸಾರ್ಥಕವಾಗಿ ಆಚರಿಸಿಕೊಳ್ಳಲು ಮುಂದಾಗಿದ್ದಾರೆ. ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, “ಸ್ನೇಹಿತರೇ ಎಲ್ಲರಿಗೂ ನಮಸ್ಕಾರ, ಡಾ.ರಾಜ್‌ಕುಮಾರ್ ಸರ್ ಹೇಳ್ತಾರೆ ನೇತ್ರದಾನ ಮಹಾದಾನ ಅಂತ. ಮುಂಬರುವ ಜೂನ್ 11ಕ್ಕೆ ನನ್ನ ಹುಟ್ಟುಹಬ್ಬವಿದೆ ಸ್ನೇಹಿತರೇ ನನಗಂತೂ ಭಾರೀ ಎಕ್ಸೈಟ್‌ಮೆಂಟ್ ಇದೆ. ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಬೇಕು ಎಂದು ನಾನು ನಿರ್ಧರಿಸಿದ್ದೇನೆ. ಅದಕ್ಕಾಗಿ ಯಾರಾದರೂ ಬಡವರಿಗೆ 5 ಜನಕ್ಕೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ನಾನು ತೀರ್ಮಾನ ಮಾಡಿದ್ದೇನೆ. ನಿಮ್ಮಲ್ಲಿ ಯಾರಿಗಾದರೂ ಕಣ್ಣಿನ ಸಮಸ್ಯೆಯಿದ್ದರೆ ನಮಗೆ ಮೆಸೇಜ್‌ ಮಾಡಬಹುದು ಅಥವಾ ಕಮೆಂಟ್‌ ಮಾಡಿ ತಿಳಿಸಬಹುದು” ಎಂದು ಹೇಳಿದ್ದಾರೆ.
ಬಿಗ್‌ ಬಾಸ್‌ ಬಳಿಕ ಪ್ರತಾಪ್‌ ʼಗಿಚ್ಚಿ ಗಿಲಿ ಗಿಲಿʼ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *