![](https://bnews.in/wp-content/uploads/2023/07/karwar-flood.webp)
ಕಾರವಾರ, ಜುಲೈ, 25: ಭಾರೀ ಮಳೆಯಿಂದಾಗಿ ಗಂಗಾವಳಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆ ಅಂಕೋಲಾದ ಜನತೆಗೆ ಪ್ರವಾದ ಭೀತಿ ಎದುರಾಗಿದೆ. ಮಂಗಳವಾರ ಕೂಡ ಇಲ್ಲಿನ ಮನೆಯಂಗಳದವರೆಗೆ ಗಂಗೆ ಪ್ರವೇಶ ಮಾಡಿದೆ. ಇದರಿಂದ ಕಳೆದ ನಾಲ್ಕು ವರ್ಷದಿಂದ ನಿರಂತರವಾಗಿ ಪ್ರವಾಹ ಎದುರಿಸಿ ಸೋತಿರುವ ಜನ ಮತ್ತೊಮ್ಮೆ ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿರುವ ಕಾರಣ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿವೆ. ಅದರಲ್ಲಿಯೂ ಗಂಗಾವಳಿ ನದಿ ಉಕ್ಕಿ ಪ್ರವಾಹದ ಮಟ್ಟ ಮೀರಿದ್ದು, ನದಿ ತೀರದ ಪ್ರದೇಶಗಳು ಜಲಾವೃತಗೊಳ್ಳುತ್ತಿವೆ. ಹೊನ್ನೆಬೈಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಹೋಯ್ಗೆ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಮನೆಯಂಗಳದಲ್ಲಿದ್ದ ಗಂಗೆ ಸೋಮವಾರ ಮನೆ ಒಳಭಾಗಗಳಿಗೂ ಪ್ರವೇಶ ಮಾಡಿದೆ.